Thursday, October 29, 2009




ಜೋಗದ ಸವಿ ಪಯಣ


ಸುಮಾರು 250 ಕಿ.ಮೀ ಗಳ ದೀರ್ಘ ಪಯಣ. ಹಾದಿಯುದ್ದಕ್ಕೂ ಕಾಡಿದ್ದು ಮುಸುಕಿದ ಮಂಜುಗಳು... ಹಲವು ಬಾರಿ ಅವುಗಳ ಪರಿ ರಸ್ತೆಯೇ ಗೋಚರವಾಗದಷ್ಟು ದಟ್ಟವಾಗಿತ್ತು. ಆಗುಂಬೆಯ ಕೊನೆಯ ತಿರುವಿನ ಮೇಲೆ ನಿಂತು ಪ್ರಪಾತ ನೋಡುತ್ತಿದ್ದಾಗಲೂ ಅಷ್ಟೇ ಕಂಡಿದ್ದು ಬರಿ ಮಂಜಿನ ಮೋಡಗಳು.
1 ಗಂಟೆಯ ಸುಮಾರಿಗೆ ಅಲ್ಲಿಗೆ ತಲುಪಿದ್ದೆವು. ತಂಪಾದ ಚಳಿಗಾಳಿಗೆ ಮೈ ನವಿರಾಗಿ ಕಂಪಿಸುತ್ತಿತ್ತು. ಟ್ಯಾಕ್ಸಿಯಿಂದ ಇಳಿಯುತ್ತದ್ದಂತೆ ಟೋಪಿ ಮಾರುವವರು ಸುತ್ತುವರಿದರು. ಬಂದಾಕ್ಷಣ ಟೋಪಿ ಹಾಕಿಸಿಕೊಳ್ಳುವುದು ಬೇಡವೆಂದು ಅತ್ತ ಮುನ್ನಡೆದೆವು.
ಇದೇನಿದು ಸುತ್ತಲೂ ಹಾಲು ಚೆಲ್ಲಿದಂತ ಮಂಜು ಕವಿದಿದೆಯಲ್ಲಾ ಛೇ... ಬಂದು ತಪ್ಪು ಮಾಡಿದೆವೇ... ಏನೂ ಕಾಣಿಸುತ್ತಿಲ್ಲವಲ್ಲ ಎಂದುಕೊಂಡೆವು... ಎಲ್ಲಿತ್ತೋ ಕಾಣೆ ಸುಯ್ಯನೆ ಬೀಸಿದ ಗಾಳಿಯೊಂದು ಎಲ್ಲವನ್ನೂ ತನ್ನಲ್ಲಿ ಬಾಚಿ ಕೊಂಡೊಯ್ಯಿತು. ಆಗ ಕಂಡಿತ್ತು ನೋಡಿ... ರಾಷ್ಟ್ರದ ಶಕ್ತಿಯ ಧಾರೆ, ಕನ್ನಡ ಸಂಸ್ಸ್ರತಿಯ ತೊಟ್ಟಿಲು, ಧುಮ್ಮಿಕ್ಕುವ ಜಲಧಾರೆ, ಆದೇ ಶಿವಮೊಗ್ಗದ ಅದ್ಭುತ ಜೋಗ್ ಫಾಲ್ಸ್... ರಾಜ ರಾಣಿ ರಾಕೆಟ್ ರೂರರ್ ಅಬ್ಬಾ ಒಂದೇ ಬಾರಿಗೆ ಮೈ ಜುಮ್ಮೆಂದ ಅನುಭವ... ರೋಮಗಳೆಲ್ಲಾ ನಿಮಿರಿ ನಿಂತಂತೆ... ಹೊಸ ಲೋಕಕ್ಕೆ ತೆರೆದುಕೊಂಡಂತೆ... ಗಾಳಿಯಲ್ಲಿ ತೇಲಾಡಿದ ಅನುಭವ... ಹಾಲಿನ ನೊರೆಯೇ ಹೊಳೆಯಾಗಿ ಹರಿದು ಧುಮ್ಮಿಕ್ಕಿ ಕಲ್ಲುಗಳ ಮಧ್ಯೆ ಭೋರ್ಗರೆಯುತ್ತಿದೆಯೇ ಎಂಬ ಸಂಶಯವೂ ಒಮ್ಮೆ ಮೂಡಿ ಮರೆಯಾಯಿತು. ಆ ಕ್ಷಣಕ್ಕೆ ಕೈಲಿದ್ದ ಕ್ಯಾಮರವೂ ಮಂಕಾದಂತೆ ಕಂಡಿತು.
5 ನಿಮಿಷ ಮಾತ್ರ... ಮತ್ತದೇ ಮಂಜು... ಯಾಕೋ ಮಳೆರಾಯನಿಗೆ ನಮ್ಮ ಮೇಲೆ ವಿಪರೀತ ಹೊಟ್ಟೆಕಿಚ್ಚಿರುವಂತೆ ಭಾಸವಾಗುತಿತ್ತು. ಬೀಳುತ್ತಿದ್ದ ಭಾರೀ ಸೋನೆಮಳೆಯ ಕಾರಣಕ್ಕೋ ಏನೋ ಈ 4 ಜಲಪಾತಗಳಲ್ಲದೆ ಇನ್ನೂ ನಾಲ್ಕಾರು ಕಡೆ ನೀರು ಧುಮ್ಮಿಕ್ಕುತಿತ್ತು. ಎಲ್ಲವೂ ಒಂದಕ್ಕಿಂತ ಒಂದು ನೋಡಲು ಸೊಗಸು... ಕಣ್ಣಿಗೆ ಹಬ್ಬ ಮನಸ್ಸಿಗೆ ತಂಪು... ಹೀಗೆ ಕಾಡುತ್ತಿದ್ದ ಮಂಜು ಮಳೆಯ ಮಧ್ಯೆಯೇ ನಾಲ್ಕಾರು ಫೋಟೋ ಹೊಡೆಸಿಕೊಂಡೆವು.
ಇಲ್ಲಿಗೆ ಬಂದು ಮುಂಗಾರು ಮಳೆ ಚಿತ್ರೀಕರಣದ ಸ್ಥಳ ನೋಡದಿದ್ದರೆ ಸಾರ್ಥಕವಿದೆಯೇ ಎಂದುಕೊಂಡು ಫಾಲ್ಸ್ ನ ಇನ್ನೊಂದು ಬದಿಗೆ ನಡೆದೆವು.
ಅಲ್ಲಿ ಇನ್ನೊಂದು ಅದ್ಭುತ... ಎತ್ತರದಿಂದ ಬೀಳುತ್ತಿರುವ ನೀರು... ಅದರ ಭೋರ್ಗರೆತ... ಹಾಸಿದ ಕಪ್ಪು ಕಲ್ಲುಗಳ ಮಧ್ಯೆ ನಡೆಯುತ್ತಾ ನೀರು ಬೀಳುವ ಸ್ಥಳಕ್ಕೆ ಬಂದಾಗ ಕಾಲುಗಳು ನಡುಗುತ್ತಿದ್ದವು. ಜೊತೆಗಿದ್ದ ಅಷ್ಟೂ ಮಕ್ಕಳನ್ನು ಅತ್ತ ಕಳಿಸಿ ಕಲ್ಲಿನಲ್ಲೇ ಮಲಗಿ ಧಾವಿಸಿ ಹರಿಯುತ್ತಿದ್ದ ನೀರನ್ನು ಬಗ್ಗಿ ನೋಡಿದಾಗ ತಲೆತಿರುಗಿ ಹೊಟ್ಟೆಯೆಲ್ಲಾ ಕಲಸಿದಂತಾಯ್ತು. ಆದರೂ ಮನಸ್ಸಿಗೇನೋ ಖುಷಿ... ಕಣ್ತುಂಬಾ ಅದನ್ನೇ ತುಂಬಿಕೊಳ್ಳುವ ಆಸೆ. ದೂರದಿಂದ ಸಣ್ಣ ಝರಿಯಂತೆ ಕಾಣುತ್ತಿದ್ದ ಅದೇ ಫಾಲ್ಸ್ ಇಲ್ಲಿ ಅಬ್ಬರಿಸುವ ಪರಿ ಕಂಡು ಮೈಜುಮ್ಮೆಂದಿತು. ಆ ಕ್ಷಣದಲ್ಲಿ ನೆನಪಾಗಿದ್ದು ಶರೀಫರ
ಮಾನವನಾಗಿ ಹುಟ್ಟಿದ್ಮೇಲೆ ಏನೇನ್ಕಂಡಿ
ಜೀವನದಾಗೆ ಒಮ್ಮೆ ನೋಡು ಜೋಗದ ಗುಂಡಿ-- ಹಾಡಿನ ಸಾಕ್ಷಾತ್ಕಾರವಾದಂತಾಯಿತು. 5 ಗಂಟೆಯವರೆಗೆ ಕುಳಿತು ಸೌಂದರ್ಯದ ಸೊಬಗನ್ನು ಸವಿದು ಹೊರಡುವ ಸಮಯದಲ್ಲಿ ಮತ್ತೆ ಜೋಗವನ್ನು ಕಣ್ತುಂಬಿಸಿಕೊಂಡು ಹೊರಟೆವು. ಹೊರಡುವಾಗ ಏನನ್ನೋ ಕಳೆದುಕೊಂಡ ಅನುಭವ... ಜೊತೆಗಿದ್ದ ತಂಗಿ 'ಅಕ್ಕ ನಾವಿಲ್ಲೇ ಸಾಗರದಲ್ಲಿ ಮನೆ ಮಾಡಿದರೆ ಹೇಗೆ ಎಂಬ ತುಂಟ ಪ್ರಶ್ನೆಯ ಉತ್ತರವೇ ನಮ್ಮೆಲ್ಲರ ಮನದಲ್ಲಿತ್ತು. ತಿರುಗಿ ಹೊರಟ ನಮಗೆ ಮಲೆನಾಡಿನ ದಟ್ಟ ಅರಣ್ಯಗಳು, ಧೋ ಎಂದು ಸುರಿಯುತ್ತಿದ್ದ ಮಳೆ, ಪ್ರಕೃತಿಯ ಹಚ್ಚ ಹಸಿರು ಯಾವುದೂ ಮುದ ನೀಡುತ್ತಿರಲಿಲ್ಲ. ಕೆಂಪಗೆ ಹರಿಯುತ್ತಿದ್ದ ಶರಾವತಿ ನದಿ ಧುಮ್ಮಿಕ್ಕಿ ಹರಿಯುವಾಗ ಬೆಳ್ಳಗೆ ನೊರೆಯಾಗಿ ಹೇಗೆ ಭೋರ್ಗರೆಯುತ್ತಾಳೆ ಎಂಬ ಪ್ರಶ್ನೆಯೇ ಕಾಡುತ್ತಿತ್ತು.